ಹಿರಿಯ ಪತ್ರಕರ್ತ ಡಾ. ಮಹೇಶ ವಾಳ್ವೇಕರ ಅವರಿಗೆ ಕ.ವಿ.ವಿ ಯಿಂದ ಡಾಕ್ಟರೇಟ್ ಪದವಿ- ರಾಜ್ಯಪಾಲರಿಂದ ಸೋಮವಾರ ಪ್ರದಾನ.. ಕಳೆದ ೨ ದಶಕಗಳಿಗಿಂತ ಹೆಚ್ಚು ಕಾಲ ವಿದ್ಯುನ್ಮಾನ, ಬಾನುಲಿ ಹಾಗೂ ಮುದ್ರಣ ಮಾಧ್ಯಮದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಹಾಗೂ ಪ್ರಸ್ತುತ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿರುವ ಡಾ. ಮಹೇಶ ವಾಳ್ವೇಕರ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ರಾಜ್ಯದ ಘನತೆವೆತ್ತ ರಾಜ್ಯಪಾಲ ಶ್ರೀಥಾವರ್ ಚೆಂದ್ ಗೆಹ್ಲೋಟ್, ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಎಮ್.ಸಿ.ಸುಧಾಕರ್ ಮತ್ತಿತರ ಗಣ್ಯರು ಸೋಮವಾರ ಪಿಹೆಚ್.ಡಿ ಪದವಿ ಪ್ರದಾನ ಮಾಡಲಿದ್ದಾರೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಂ. ಗಂಗಾಧರಪ್ಪ ಅವರ ಮಾರ್ಗದರ್ಶನದಲ್ಲಿ ಡಾ. ಮಹೇಶ ವಾಳ್ವೇಕರ ಅವರು ಪತ್ರಿಕೋದ್ಯಮ ವಿಷಯದಲ್ಲಿ ಸಂಶೋಧನೆ ಕೈಗೊಂಡು ಮಹಾಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಮಂಡಿಸಿದ್ದರು. ಡಾ. ಮಹೇಶ ವಾಳ್ವೇಕರ ಅವರು ಕಳೆದ ೨೩ ವರ್ಷಗಳಿಂದ ಪತ್ರಿಕೋದ್ಯಮಿಯಾಗಿ ಮಾಧ್ಯಮದ ಎಲ್ಲಾ ಪ್ರಕಾರಗಳಲ್ಲೂ ಸಮರ್ಥವಾಗಿ, ಪ್ರಾಮಾಣಿಕವಾಗಿ ಹಾಗೂ ಕ್ರಿಯಾಶೀಲವಾಗಿ ಕರ್ತವ್ಯ ನಿರ್ವಹಿಸಿದ್ದು, ಹಲವು ಸಂಘ ಸಂಸ್ಥೆಗಳಿಗೆ ಮಾಧ್ಯಮ ತಜ್ಞರಾಗಿ ಹಾಗೂ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಧಾರವಾಡ ಅಕಾಶವಾಣಿ ಕೇಂದ್ರದ ಸುದ್ದಿ ವಿಭಾಗದ ವರದಿಗಾರರಾಗಿ, ವಾರ್ತಾ ವಾಚಕರಾಗಿ ಕರ್ತವ್ಯ ನಿರ್ವಹಿಸಿರುವ. ಡಾ. ಮಹೇಶ ವಾಳ್ವೇಕರ, ಉದಯ ಟಿ ವಿ ಸುದ್ದಿ ವಾಹಿನಿ ಸೇರಿದಂತೆ ಹಲವು ವಿದ್ಯುನ್ಮಾನ ಸುದ್ದಿವಾಹಿನಿಯ ಜಿಲ್ಲಾ ವರದಿಗಾರರಾಗಿ ಹಾಗೂ ಮುದ್ರಣ ಮಾಧ್ಯಮದ ಹಲವು ಪತ್ರಿಕೆಗಳ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಾಡಿದ್ದಾರೆ. ದೂರದರ್ಶನ ಚಂದನ ವಾಹಿನಿಯ ವರದಿಗಾರರಾಗಿ, ಸಹಾಯಕ ಸುದ್ದಿ ಸಂಪಾದಕರಾಗಿಯೂ ಸಹ ಕರ್ತವ್ಯ ನಿರ್ವಹಿಸಿ ಜನಮನ್ನಣೆಗೆ ಪಾತ್ರರಾಗಿದ್ದಾರೆ.ಪ್ರಸ್ತುತ ಕಳೆದ ಎರಡು ವರ್ಷ ಎಂಟು ತಿಂಗಳುಗಳಿಂದ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.