ಆರ್.ಟಿ.ಇ ಸಮರ್ಪಕವಾಗಿ ಅನುಷ್ಠಾನ ಆಗಲಿ: ಪಿ.ಎಚ್. ನೀರಲಕೇರಿ
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಷ್ಕ್ರೀಯವಾಗಿದ್ದ ಶಿಕ್ಷಣ ಹಕ್ಕು ಕಾಯ್ದೆ RTE ಅನ್ನು ಈಗಿನ ಕಾಂಗ್ರೆಸ್ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಬಡಮಕ್ಕಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಕಾಂಗ್ರೆಸ್ ವಕ್ತಾರ ಹಾಗೂ ಹೈಕೋರ್ಟ್ ವಕೀಲರಾದ ಪಿ.ಎಚ್. ನೀರಲಕೇರಿ ಅವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಮಹತ್ವಕಾಂಕ್ಷೆ ಯೋಜನೆಯಾದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಬಿಜೆಪಿ ಸರ್ಕಾರದಲ್ಲಿನ ಎಡವಟ್ಟುಗಳಿಂದ (ಆರ್.ಟಿ.ಇ) ಸಂಪೂರ್ಣ ಹಳ್ಳ ಹಿಡಿಯುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಆರ್ಟಿಇಯಡಿ ಶಾಲೆಗೆ ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆರ್ಟಿಇಯಡಿ ಖಾಸಗಿ ಶಾಲೆಗಳನ್ನು ಕೈ ಬಿಟ್ಟಿರುವುದೇ ಪೋಷಕರು ತಮ್ಮ ಮಕ್ಕಳನ್ನು ಆರ್ಟಿಇಯಡಿ ಶಾಲೆಗೆ ಪ್ರವೇಶಾತಿ ಕಲ್ಪಿಸಲು ಹಿಂದೇಟು ಹಾಕಲು ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಅನುದಾನಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ವಿದ್ಯಾಭ್ಯಾಸಕ್ಕೆ ಅವಕಾಶವೇ ಇರುವುದಿಲ್ಲ. ಆರ್ಟಿಇ ಇಲ್ಲಿ ಅನ್ವಯಿಸುವುದಿಲ್ಲ. ಹಾಗಾದರೆ ಆರ್ಟಿಇಯಡಿ ಅನುದಾನಿತ ಶಾಲೆಗೆ ನೀಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ. ಕೈ ಬಿಟ್ಟಿರುವ ಖಾಸಗಿ ಶಾಲೆಗಳನ್ನೂ ಆರ್ ಟಿ ಇ ವ್ಯಾಪ್ತಿಗೆ ಸೇರಿಸಬೇಕು ಎಂದು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿಗಳೇ, 2013 ರಿಂದ 2018 ರಲ್ಲಿ ತಮ್ಮ ನೇತೃತ್ವದ ಕಾಂಗ್ರೆಸ್ ಸರಕಾರ RTE ಮಸೂದೆಯನ್ನು ಸಮರ್ಪಕವಾಗಿ ಜಾರಿಗೆ ತಂದಿತ್ತು ಮತ್ತು ಸಮರ್ಪಕ ಅನುಷ್ಠಾನವೂ ಆಗಿತ್ತು, ಆದರೆ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ RTE ಕಾನೂನು ಇದ್ದರೂ ಅದನ್ನು ಜಾರಿಗೆ ತರುವಲ್ಲಿ ಮರೀಚಿಕೆ ಮಾಡಿ ಎಷ್ಟೂ ಬಡ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಲು ಕಾರಣವಾಯಿತು ಎಂದು ಆರೋಪಿಸಿದ್ದಾರೆ.
ಆದರೆ ಮತ್ತೆ ನಿಮ್ಮ (ಸಿದ್ದರಾಮಯ್ಯ) ನೇತೃತ್ವದ ನಮ್ಮದೇ ಕಾಂಗ್ರೆಸ್ ಸರಕಾರ ಬಂದಿದ್ದು RTE ಕಾನೂನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಶಿಕ್ಷಣ ಇಲಾಖೆಗೆ ನಿರ್ದೇಶಿಸಿ ಬಡ ಮಕ್ಕಳಿಗೆ ನ್ಯಾಯ ವದಗಿಸಲು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
…ಪಿ.ಎಚ್. ನೀರಲಕೇರಿ
ಹೈಕೋರ್ಟ್ ವಕೀಲರು, ಕೆಪಿಸಿಸಿ ವಕ್ತಾರರು, ಧಾರವಾಡ

