. ಜಿಲ್ಲಾ ಪೊಲೀಸ್ ಇಲಾಖೆಯಿಂದ ಡಿಎಆರ್ ಮೈದಾನ ಆವರಣದ ಪೊಲೀಸ್ ಹುತಾತ್ಮ ಸ್ಮಾರಕದ ಹತ್ತಿರ ಪೊಲೀಸ್ ಹುತಾತ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಎಂ.ಬ್ಯಾಕೋಡ ಅವರು ಸ್ವಾಗತಿಸಿ, ಪ್ರಸಕ್ತ ಸಾಲಿನಲ್ಲಿ ಸಾರ್ವಜನಿಕರ ರಕ್ಷಣೆ, ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ರಾಷ್ಟ್ರದ ಸುಮಾರು 189 ಪೋಲಿಸ ಅಧಿಕಾರಿ, ಸಿಬ್ಬಂದಿಗಳ ಹೆಸರುಗಳನ್ನು ವೇದಿಕೆಯಲ್ಲಿ ಪ್ರಸ್ತುತಪಡಿಸಿದರು. ವಿವಿಧ ಗಣ್ಯರು ಪೊಲೀಸ್ ಹುತಾತ್ಮ ಸ್ಮಾರಕಕ್ಕೆ ಪುಷ್ಪಚಕ್ರ ಅರ್ಪಿಸಿ, ಗೌರವ ಸಲ್ಲಿಸಿದರು. ಮತ್ತು ಪ್ರೊಬೇಷನರಿ ಡಿವೈಎಸ್ ಪಿ ಗೌರವ ಕೆ.ಸಿ ಅವರ ನೇತೃತ್ವದಲ್ಲಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸ್ ಇಲಾಖೆ ಗೌರವ ವಂದನೆ ಸಲ್ಲಿಸಿದರು. *ಮಾನವೀಯತೆ ಮೆರೆದ ಗರಗ ಠಾಣೆ ಪೊಲೀಸ್ ಸಿಬ್ಬಂದಿ:* ತಮ್ಮ ಸಹೋದ್ಯೋಗಿ ಮೃತ ಹುಚ್ಚಪ್ಪ ಮಲ್ಲೆನ್ನವರ ಕುಟುಂಬ ಬಡತನ ಹಿನ್ನಲೆಯದ್ದು, ಮಗನ ವೇತನದಲ್ಲಿ ಮನೆತನ, ಮಕ್ಕಳ ಭವಿಷ್ಯ ರೂಪಿಸುತ್ತಿದ್ದ ನೀಲವ್ವ ಮತ್ತು ಹಣಮಂತಪ್ಪ ದಂಪತಿಗೆ ಮಗನ ಸಾವು ಬರಸಿಡಿಲು ಬಡಿದಂತೆ ಆಗಿದೆ. ಅವರ ದುಃಖ, ತಾಪ ಇನ್ನು ತಣ್ಣಗಾಗಿಲ್ಲ. ಇಂದು ಪೊಲೀಸ್ ಹುತಾತ್ಮ ದಿನಕ್ಕೆ ಆಗಮಿಸಿದ್ದ ಅವರನ್ನು ಎಸ್ಪಿ ಮೊದಲಾಗಿ ಎಲ್ಲ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಸಮಾದಾನ ಹೇಳಿ ಸಂತೈಸಿದರು. ಮೃತ ಹುಚ್ಚಪ್ಪ ಮಲ್ಲೆನ್ನವರ ಕರ್ತವ್ಯ ನಿರ್ವಹಿಸುತ್ತಿದ್ದ ಗರಗ ಪೊಲೀಸ್ ಠಾಣೆ ಹಾಗೂ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿರುವ ಹುಚ್ಚಪ್ಪನ ಸಹೋದ್ಯೋಗಿಗಳು ಪಿಎಸ್ಐ ಎಫ್.ಎಮ್.ಮಂಟೂರ ನೇತೃತ್ವದಲ್ಲಿ ಸುಮಾರು 1 ಲಕ್ಷ ಐದು ಸಾವಿರ ರೂ.ಗಳನ್ನು ಆರ್ಥಿಕ ಸಹಾಯಧನವಾಗಿ ಇಂದಿನ ಕಾರ್ಯಕ್ರಮದಲ್ಲಿ ಎಸ್.ಪಿ.ಡಾ.ಗೋಪಾಲ ಬ್ಯಾಕೋಡ ಮೂಲಕ ನೀಡಿದರು. ಪೊಲೀಸ್ ಇಲಾಖೆ ಮತ್ತು ಸರಕಾರದಿಂದ ಸೀಗುವ ಎಲ್ಲ ಸೌಲಭ್ಯ ಹಾಗೂ ಆರ್ಥಿಕ ನೆರವನ್ನು ಮೃತ ಹುಚ್ಚಪ್ಪನ ಕುಟುಂಬಕ್ಕೆ ತಲುಪಿಸಲು ಎಲ್ಲ ಸಹಾಯ, ನೆರವು ನೀಡಲಾಗುವುದು ಎಂದು ಎಸ್.ಪಿ ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕೆ.ಎಸ್ಐಎಸ್ಎಫ್ ಕಮಾಂಡೆಂಟ್ ಟಿ.ಫೈಜುದ್ದೀನ, ಪಿಟಿಎಸ್ ಪ್ರಾಂಶುಪಾಲ ಎಂ.ಎಂ.ಯಾದವಾಡ, ಧಾರವಾಡ ಗ್ರಾಮೀಣ ಡಿವೈಎಸ್ಪಿ ಎಸ್.ಎಮ್.ನಾಗರಾಜ, ಡಿಎಆರ್ ಡಿವೈಎಸ್ ಪಿ ಶಿವಾನಂದ ಜಿ.ಸಿ., ಡಿಸಿಆರ್ ಬಿ. ಡಿವೈಎಸ್ ಪಿ ಸಂಗಮನಾಥ ಹಿರೇಮಠ, ಜಿಲ್ಲಾ ಪೊಲೀಸ್ ಕಚೇರಿ ಸಹಾಯಕ ಆಡಳಿತಾಧಿಕಾರಿ ಮಹಾಂತೇಶ ಎಸ್.ಹಿರೇಮಠ, ಇತ್ತಿಚೆಗೆ ಹುತಾತ್ಮರಾದ ನಾಗರಿಕ ಪೊಲೀಸ್ ಪೇದೆ ಹುಚ್ಚಪ್ಪ ಮಲ್ಲೆನ್ನವರ ತಂದೆ, ತಾಯಿ ಮತ್ತು ಕುಟುಂಬ ಸದಸ್ಯರು, ನಿವೃತ್ತ ಪೊಲೀಸ್ ಅಧಿಕಾರಿ ಶೇಖರ ಅಂಗಡಿ, ಡಾ.ಶಶಿಧರ ಕಳಸೂರಮಠ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಪೊಲೀಸ್ ಕುಟುಂಬ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು

